ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

July 21, 2008

ನಿಹಾರಿಕಾ

Filed under: ಕಥೆ — kavya gowda @ 12:04 pm
ಪ್ರೀತಿಸಿಯೆ, ಎಲ್ಲರ ಒಪ್ಪಿಗೆ ಪಡೆದೇ ಮದುವೆಯಾಗಿದ್ದರು ಆ ದಂಪತಿಗಳು .ಆದರೆ ಇಬ್ಬರಲ್ಲೂ ಏನೂ ಕೊರತೆ. ಇಬ್ಬರೂ ಸಂತೋಷವಾಗಿರಲಿಲ್ಲ ,ಕಾರಣ ಇಬ್ಬರಿಗೂ ಹೊಂದಾಣಿಕೆ ಎನ್ನುವುದೇ ಗೊತ್ತಿರಲಿಲ್ಲ. ಚಿಕ್ಕಪುಟ್ಟದ್ದಕ್ಕೂ ಜಗಳ , ಕಿತ್ತಾಟ. ಅವ ಹೇಳಿದ್ದು ಅವಳು ಒಪ್ಪಳು ,ಅವಳು ಹೇಳಿದ್ದು ಅವನು ಕೇಳನು. ಮನೆಯಲ್ಲಿ ಯಾವಾಗಲು ಕಿರಿಕಿರಿ . ಬಡವರೇನಲ್ಲ , ಶ್ರೀಮಂತರೇ . ನೋಡುವವರಿಗೆಲ್ಲ ಇವರ ಸಂಸಾರ ಒಂದು ವಿಚಿತ್ರ ಸಂಸಾರ.ಹೀಗೆ ಒಂದೆರಡು ವರುಷಗಳ ಕಳೆದ ನಂತರ ಇವರಿಗೊಂದು ಮುದ್ದಾದ ಹೆಣ್ಣು ಮಗು .ಹೆಸರು ನಿಹಾರಿಕಾ. ಗಂಡ ಹೆಂಡತಿಯಲ್ಲಿ ಜಗಳ ಕಿತ್ತಾಟವಿದ್ದರು ಮಗಳನ್ನು ಮುದ್ದಾಗಿಯೇ ಬೆಳೆಸಿದರು.ಒಳ್ಳೆಯ  ವಿದ್ಯಾಭ್ಯಾಸವನ್ನೂ ಕೊಡಿಸಿದರು. 
ಆದರೆ  ಬೆಳೆಯುತಿದ್ದ ನಿಹಾರಿಕಳಿಗೆ  ಅಪ್ಪ ಅಮ್ಮನ ನಡವಳಿಕೆ  ಜಗಳ ಬೇಸರ ತರಿಸತೊಡಗಿತ್ತು. ದಿನ ದಿನ ಚಿಕ್ಕಪುಟ್ಟದ್ದಕ್ಕೂ ಕಿತ್ತಾಡುವುದನ್ನ ರೇಗಾಡುವುದನ್ನ ನೋಡಿ ನೋಡಿ ಸಾಕಾಗಿ ಹೋಗಿತ್ತು .ಅವರು ಎಷ್ಟೇ ಪ್ರೀತಿಯಿಂದ ನೋಡಿಕೊಂಡರು ೧೦ ನೆ  ತರಗತಿ ಮುಗಿಯುತಿದ್ದಂತೆ ಮನೆಯಲ್ಲಿರುವುದಕ್ಕೆ ಬೇಸರಗೊಂಡು ಹಾಸ್ಟೆಲ್  ಸೇರಿದ್ದಳು.ಪಾಪ ಅರಿಯದ ಹುಡುಗಿ ಹಾಸ್ಟೆಲ್ ನಲ್ಲಿ ಇದ್ದ ಹುಡುಗಿಯರ ಜೊತೆ ಸೇರಿ ಕೆಟ್ಟ ಬುದ್ದಿಗಳನ್ನೆಲ್ಲ ಕಲಿಯ ತೊಡಗಿದಳು .ಕಾಲೇಜ್ ಬೇರೆ . ಕೇಳಿದಷ್ಟು ಹಣ ಮನೆಯಲ್ಲಿ ಕೊಡುತಿದ್ದರು . ಯಾವುದಕ್ಕೂ ಕೊರತೆ ಇರಲಿಲ್ಲ  .ಚೆನ್ನಾಗಿ ಓದುತಿದ್ದ ಹುಡುಗಿ ಸಿನಿಮಾ, ಹೋಟೆಲ್ ಸುತ್ತಾಟವೆಂದು ಓದುವುದನ್ನೇ ಮರೆತಿದ್ದಳು . ಅಪ್ಪ ಅಮ್ಮ ತಮ್ಮ ಅರ್ಥವಿಲ್ಲದ ಜಗಳದಲ್ಲಿ ಇದನ್ನು ಗಮನಿಸಲೇ ಇಲ್ಲ.
ಹೀಗೇ ಮತ್ತೆರಡು ವರ್ಷಗಳು  ಕಳೆದು ಹೋಗಿದ್ದವು .
ಯಾರ ಭಯವೂ ಇಲ್ಲದೆ ಬೆಳೆಯುತಿದ್ದ ನಿಹಾರಿಕಾ ತನ್ನನ್ನು ಕೇಳುವವರು ಹೇಳುವವರು ಯಾರು ಇಲ್ಲ ,ಅಪ್ಪ ಅಮ್ಮನಿಗೆ ಅವರ ಜಗಳವೇ ಹೆಚ್ಚು ಅವರು ನನ್ನ ಬಗ್ಗೆ ಕೇಳುವುದಿಲ್ಲ  ಎಂದುಕೊಂಡವಳಿಗೆ  ಹರ್ಷ ಎನ್ನುವ ಯಾವ ಕೆಲಸಕ್ಕೂ ಬಾರದ ಹುಡುಗನೊಬ್ಬನ  ಪರಿಚಯವಾಯ್ತು . ಇವರಿಬ್ಬರ ಪರಿಚಯ ಸ್ನೇಹವಾದಾಗ  ಪಾಪ  ನಿಹಾರಿಕ ಅವನನ್ನು  ಪ್ರೀತಿಸ ತೊಡಗಿದಳು .ಅವನೂ ಪ್ರೀತಿಸಿದ್ದ  ಆದರೆ ಅವಳನ್ನಲ್ಲ  , ಬೇಕು  ಬೇಕಾದ ಹಾಗೆ ಖರ್ಚು ಮಾಡುತಿದ್ದ ಇವಳ ಹಣವನ್ನು  ಮಾತ್ರ ಪ್ರೀತಿಸಿದ್ದ .ಪಾಪ ಇದು ಆ ಹುಡುಗಿಗೆ ತಿಳಿಯದಾಗಿತ್ತು. ಇವಳ ಪ್ರೀತಿಯ ವಿಷಯ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ . ಅವರ ಜಗಳಗಳು ಮುಗಿಯದೆ ಹಾಗೆ ಸಾಗುತಿತ್ತು .
ಹರ್ಷನೊಂದಿಗಿನ ಸುತ್ತಾಟ ಹೆಚ್ಚಾಗತೊಡಗಿತು . ನಿಹರಿಕಳ  ಓದು ನಿಂತೇ ಹೋಗಿತ್ತು .  ಜೊತೆಗಿದ್ದ ಗೆಳತಿಯರೆಲ್ಲ ದೂರಾಗಿದ್ದರು .ಹೀಗೆ  ಯಾರ ಭಯವೂ ಇಲ್ಲದೆ ಹರ್ಷ ನೊಡನೆ  ಸುತ್ತಾಡುವುದನ್ನು  ನೋಡಿದ ಯಾರೋ ಊರಿನ ಪರಿಚಯದ ಸ್ನೇಹಿತರು ಇವಳ ಸುತ್ತಾಟವನ್ನು ನೋಡಿ ಅಪ್ಪ ಅಮ್ಮನಿಗೆ ವಿಷಯವನ್ನ ತಿಳಿಸಿದ್ದರು.ವಿಷಯ ತಿಳಿದ ಅಪ್ಪ -ಅಮ್ಮ ಕೋಪಗೊಂಡರೆ ಹೊರತು ಅವರ ತಪ್ಪು ಅವರು ಅರಿಯಲೇ ಇಲ್ಲ . ಇದಾದ ಮೇಲೂ ಅವರಿಬ್ಬರ ಜಗಳ ಕಿತ್ತಾಟ ನಿಲ್ಲಲಿಲ್ಲ. ಒಬ್ಬರ ನೊಬ್ಬರು ದೂರಿಕೊಳ್ಳುವುದು ಇನ್ನೊ ಹೆಚ್ಚಾಗಿತ್ತು. ನಿಹಾರಿಕಳನ್ನು  ಹಾಸ್ಟೆಲ್ ನಿಂದ  ಬಿಡಿಸಿ ಕರೆದು ಕೊಂಡು ಬಂದು ಮನೆಯಲ್ಲಿ ಕೂಡಿ ಹಾಕಿದ್ದು ಆಯಿತು. ಪಾಪ ಮನೆಯಲ್ಲಿ ನಿಹಾರಿಕಳಿಗೆ ಹುಚ್ಚು ಹಿಡಿಯುವ ಹಾಗಾಗ ತೊಡಗಿತು .ಅಪ್ಪ ಅಮ್ಮ ಅವಳಿಗೆ ಬುದ್ಡಿ ಹೇಳುವುದ ಬಿಟ್ಟು ಈ ವಿಷಯವಾಗಿ ಜಗಳಗಳನ್ನು ಹೆಚ್ಚು ಮಾಡ ತೊಡಗಿದಾಗ ಪಾಪ ಹುಡುಗಿ ಮನೆ ಬಿಟ್ಟು ಹರ್ಷನೊಂದಿಗೆ ಹೋಗುವ ನಿರ್ಧಾರ ಮಾಡಿ  ವಿಷಯವನ್ನು ಹರ್ಷನಿಗೆ  ಹೇಳಿದಾಗ ಅವನೂ ಒಪ್ಪಿದ್ದ .
ಹರ್ಷ ಕೂಡಾ ಇದೆ  ಸಮಯಕ್ಕಾಗಿ ಕಾಯುತಿದ್ದನೆಂಬ ಸತ್ಯ  ಪಾಪ ಅವಳಿಗೆ ಹೊಳೆಯಲೇ ಇಲ್ಲ . ಇದೆ ಸಮಯಕ್ಕಾಗಿ  ಕಾದಿದ್ದ ಹರ್ಷ ನಿಹಾರಿಕಳ ಮನವೊಲಿಸಿ ಮನೆಯಿಂದ ಹಣ ಒಡವೆಗಳನೆಲ್ಲ ತೆಗೆದುಕೊಂಡು ಬರುವಂತೆ  ಹೇಳಿದ. ಹುಚ್ಚು ಹುಡುಗಿ , ಮನೆಯಿಂದ ದೂರಾಗುವ ಯೋಚನೆಯಲ್ಲಿ ತನ್ನ ಕೈಗೆ ಸಿಕ್ಕ ಒಡವೆ ಹಣ ಎಲ್ಲ ತೆಗೆದುಕೊಂಡು ಮುಂದಿನ ಅನಾಹುತಗಳನ್ನು ಯೋಚಿಸದೇ ಅವನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದಳು.ಅಪ್ಪ ಅಮ್ಮನನ್ನು  ತೊರೆದಿದ್ದಳು .
ನಿಹಾರಿಕಳ   ತಂದೆ ತಾಯಿಗೆ  ಏನಾಯ್ತು  ಎಂದು  ತಿಲಿಯುವುದರವೊಳಗೆ  ನಿಹಾರಿಕ ಅವರಿಂದ , ಅವರ ಮನೆಯಿಂದ ದೂರ ಹೋಗಿದ್ದಳು .ಎಲ್ಲ ಕಡೆ  ಹುಡುಕಿದರೂ ಹುಡುಕಿಸಿದರೂ  ನಿಹಾರಿಕ ಸಿಗದಾಗಿದ್ದಳು . ಕೊನೆಗೆ ಏನು ಮಾಡುವುದೆಂದು ತಿಳಿಯದ ಅಪ್ಪ ಅಮ್ಮ ಪೋಲಿಸ್ ನವರಿಗೂ ದೂರನ್ನು ಕೊಟ್ಟಿದ್ದರು.ಪೋಲಿಸ್ ನವರು ಅವರ ಕೆಲಸ ಅವರು ಮಾಡುತಿದ್ದರು .  ಪಾಪ ಅಪ್ಪ ಅಮ್ಮನಿಗೆ ತಮ್ಮ ತಪ್ಪಿನ ಅರಿವಾಗಿತ್ತು . ನಿಹಾರಿಕಳ ಈ ತಪ್ಪು ನಿರ್ದಾರಕ್ಕೆ ತಾವೇ ಕಾರಣ ಎನ್ನುವ ಸತ್ಯ ಇಬ್ಬರಿಗೂ ತಿಳಿದಿತ್ತು . ತಮ್ಮ ತಪ್ಪಿನ ಅರಿವಾಗಿ ತಪ್ಪನ್ನು ತಿದ್ದಿಕೊಂಡು ಒಬ್ಬರ  ದುಃಖಕ್ಕೆ  ಒಬ್ಬರಾದರೆ   ಪಾಪ  ಏನೂ  ಅರಿಯದೇ ತಪ್ಪು ಮಾಡಿದ ನಿಹಾರಿಕಾ ,
ಅವಳು ಮಾಡಿದ್ದೂ ತಪ್ಪು ಎಂದು ಅರಿವಾಗುವಷ್ಟರಲ್ಲಿ ಹರ್ಷ ಅವಳಿಗೆ ಮೋಸ  ಮಾಡಿ ಅವಳನ್ನು ಬಿಟ್ಟು ಹೋಗಿದ್ದ. ಪ್ರಾಣ ಕಿಂತ  ಹೆಚ್ಚಾಗಿ ಪ್ರೀತಿಸಿದ  ಹರ್ಷ ಮೋಸ , ಚಿಕ್ಕ ವಯಸ್ಸಿನ ಅವಳು ಒಂಟಿಯಾಗಿ ಜೀವನ ನಡೆಸಲಾಗದ ಅಸಹಾಯಕತೆ , ಮನೆಯ ಪರಿಸ್ಥಿತಿ  ಇವೆಲ್ಲವನ್ನೂ ಯೋಚಿಸಿದ ನಿಹಾರಿಕ  ತಂದೆ ತಾಯಿಗೆ ಮುಖವನ್ನು ತೋರಿಸುವ ಮನಸಿಲ್ಲದೇ ಆತ್ಮಹತ್ಯೆ ಮಾಡಿಕೊಂಡು ಅನಂತದೆಡೆಗೆ  ಪ್ರಯಾಣ ಬೆಳೆಸಿ ನಿಹಾರಿಕೆಯಾದಳು .

2 Comments »

  1. ಈ ಕತೆ ಬದುಕಿನ ಸತ್ಯಕ್ಕೆ ಹಿಡಿದ ಕನ್ನಡಿ.

    Comment by sunaath — July 31, 2008 @ 5:09 am | Reply

  2. ಎಲ್ಲೋ ಓದಿದ ಕಥೆಯನ್ನ ಯಾರೋ ನೆನಪಿಸಿದಂತಿದೆ

    Comment by Dr. Astagimath — January 31, 2009 @ 6:59 am | Reply


RSS feed for comments on this post. TrackBack URI

Leave a comment

Blog at WordPress.com.