ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

June 25, 2011

ಕೇಳದ ಮನಸು

Filed under: ಅರಿಯದೇ ಬಂದದ್ದು — kavya gowda @ 10:01 am

ಹಣೆಬರಹದಲಿ ’ಅವನ’
ನನಗಾಗಿ ಬರೆದಿಲ್ಲ,
ತಿಳಿದ ವಿಷಯಕೆ
ಏಕೆ ಈ ಹುಚ್ಚಾಟ!!!!!
ಅಳುತಿರುವೆ ಅವನ
ಮೋಸವಿಲ್ಲದ ಪ್ರೀತಿಗಾಗಿ-
ಉಸಿರುಗಟ್ಟಿಸುತಿದೆ ಅವನಿಲ್ಲದ
ಪ್ರತಿ ಕ್ಷಣಾಕ್ಷಣವೂ-
ಮರುಕಳಿಸುತಿವೆ ಅವನಾಡಿದ
ಒಂದೊಂದೂ ಮಾತು,
ಬಯಸುತಿದೆ ದುಃಖಗಳಿಗೆ
ಅವನ ಸಮಾದನದ ಸಾಂತ್ವನ,
ಬೇಕೆನಿಸಿದೆ ಅವನೊಡನೆ
ಓಡಾಡಿದ ಒಡನಾಟ
ಪ್ರಯತ್ನೀಸಿಯೂ ಮರೆಯಲಾಗಲಿಲ್ಲ
ನನ್ನ ಅಳುವಿಗೆ
ಸ್ಪಂಧಿಸಿದ ಆ ಕಣ್ಣುಗಳಾ,
ಕಣ್ಣೀರಾ ಒರೆಸಿದ
ಮೃದುವಾದ ಆ ಕೈಗಳ,
ಆಸರೆಯಾಗಿ ಧೈರ್ಯ
ಹೇಳಿದ ಆ ಬುಜಗಳ,
ಸದಾ ನನ್ನೊಡನೆಯಿರುವ
ಭರವಸೆಯ ಅಪ್ಪುಗೆಯ,
ಪ್ರೀತಿಯ ಚುಂಭನವಾ
ಅವನಿತ್ತ ನಂಬಿಕೆಯ ಬಾಷೆಗಳ,,,,
ಹೇಗೆ ಮರೆಯಲಿ ????
ನೆರಳಂತೆ ಹಿಂಬಾಲಿಸುತಿರುವ
ನೆನಪುಗ ಜೊತೆಯಲಿ
ಕೇಳದ ಮನಸು
ಕಾಣುತಿದೆ ಕನಸ
ಅವನ ಬರುವಿಗಾಗಿ…….

December 11, 2010

ಮನದಾಳದ ನೋವು

Filed under: ಅರಿಯದೇ ಬಂದದ್ದು — kavya gowda @ 10:32 am

ಏಷ್ಟೋ ಹಾಳೆಗಳ ಮೇಲೆ
ಪದಗಳು ಸೇರಿ ನರ್ತನ
ಮಾಡಿ ಅರಳಿರಿವುದೊಂದು ಕತೆ,
ಆದ ಕೂಡಿಸಿ ಓದುವೆಯಾದರೆ
ನಾಯಕ ನೀನಾಗಿರುವೆ
ಕಳನಾಯಕಿ ನಾನಾಗಿರುವೆ
ನಿನ್ನ ಯೋಚನೆಗೆ.
ನಿನಗೆ ಸಂತಸವಿಲ್ಲ
ಎನಗೆ ಬೇಸರ ತಪ್ಪಿದಲ್ಲ
ತಪ್ಪುಗಳು ಇಬ್ಬರಲಿದ್ದರೂ
ನಾ ಹೇಳಿದ್ದು ನಿನಗೆ ಬೇಡ
ನೀ ಹೇಳುವುದು ನನಗೂ ಬೇಡ.
‘ಪ್ರೀತಿ’ ಇಬ್ಬರಲೂ
ತುಳುಕಿ ತೂರಾಡಿದೆಯಾದರೂ
ಸನಿಹ ಇಬ್ಬರಿಗೂ ಬೇಡವಾಗಿದೆ.
ನನ್ನ ಮಾತು ನಿನಗೆ ಹಿಡಿಸದು
ನಿನ್ನ ಮಾತು ನನಗೂ ಹಿಡಿಸದು
ಆದರೂ ನಿಲ್ಲದ್ದು ವಾದ
ನಾ ಸೋಲಲಾರೆ
ನೀ ಸೋಲಬಯಸಲಾರೆ
ಕೊನೆಗೆ ತುಕ್ಕು ಹಿಡಿದದ್ದು
ಒಂದಾಗಬೇಕಾದ ಸಂಬಂಧ.
ನೀನು ಪ್ರೀತಿಸಿದ್ದೆ
ನಾನು ಪ್ರೀತಿಸಿರುವೆ
ಎಲ್ಲರೂ ಒಪ್ಪಿದ್ದು
ಆದರೂ ಒಂದಾಗಲಾಗದ್ದು
ವಿಪರ್ಯಾಸವಾದರೂ
ಬ್ರಹ್ಮ ಗೀಚಿದ್ದು
ದೇವರು ಬಯಸಿದ್ದು.
ಇದ ನೀ ಒಪ್ಪಲಾರೆ
ನಾನು ಒಪ್ಪಿಕೊಳ್ಳಲಾರೆ
ಆದರೆ ಎಲ್ಲಿಯವರೆಗೆ
ಸಮಯ ನಿಲ್ಲುವುದೇ,
ನಾನು ನೀನು ಅಲ್ಲ
ನನ್ನದು ನಿನ್ನದೂ ಆಗಲಿಲ್ಲ
ನಾನೊಂದು ತೀರ
ನೀನೊಂದು ತೀರ
ಇಬ್ಬರದೂ ವಿರಹಾ
ಆದರೂ ಜೀವನವೊಂದು
ನಿಲ್ಲದ ಪ್ರಯಾಣ.

November 22, 2010

ಸುಮ್ಮನೇ……ಹುಡುಕುತ್ತಾ

Filed under: ಅರಿಯದೇ ಬಂದದ್ದು — kavya gowda @ 9:54 am

ತಣ್ಣನೆಯ ಗಾಳಿಯಲಿ
ತುಂತುರು ಮಳೆ
ಹಕ್ಕಿಗಳ ಚಿಲಿಪಿಲಿ
ಗಾಢವಾದ ರಾತ್ರಿಯೊಂದು
ಕಳೆದು ಹೊಸತೊಂದು
ದಿನದ ಆರಂಭದಲಿ
ಬಾರವಾದ ಮನಸು
ಹಗುರವಾದಂತೆನಿಸಿರಲು
ಬೆಚ್ಚನೆಯ ಸ್ಪರ್ಶವೊಂದು
ಮೈತಾಗಿ ಕಣ್ತೆರೆದರೆ
ಎದುರಿನಲಿ ನೀನು…
ಬೆಚ್ಚಿ ಎದ್ದವಳಾ
ತನ್ನ ಹೆಗಲಾಸರೆ
ನೀಡಿ ಎದೆಗೊರಗಿಸಿಕೊಂಡಿರಲು
ನಿನ್ನೆಯ ಬೇಸರವ ನೆನೆದು
ಕಣ್ಣಂಚಿನಲಿ ಜಾರಿದ ನೀರ
ನೋಡಿ ನಿನ್ನ ಕಣ್ಣಲೂ
ಮೂಡಿದ ನೀರು
ನನ್ನ ಕೆನ್ನೆಯ
ಮೇಲೆ ಜಾರಿ ಬಿದ್ದಿರಲು
ಬಿಕ್ಕಿ ಬಿಕ್ಕಿ ಅತ್ತವಳಾ
ಹಣೆಯ ಮೇಲೊಂದು
ಪ್ರೀತಿಯ ಮುತ್ತನಿತ್ತು
ಕ್ಷಮೆಯಾಚಿಸಿ ಎಲ್ಲಿ

ಮರೆಯಾಗಿ ಹೊದೆಯೊ

ನನ್ನ ನಲ್ಲ.

August 18, 2009

ಕಲ್ಪನೆ

ಹಕ್ಕಿಯಂತೆ ಹಾರುತಿರುವೆ
ಮೇಲಕ್ಕಲ್ಲ ಕೆಳಕ್ಕೆ
ಕತ್ತಲು ಆವರಿಸಿರುವುದಾದರೂ
ಅರಿವಾಗುತಿದೆ
ಪಾತಾಳದೊಳಗೆ ಬೀಳುವಿಕೆ.
ಮೇಲೆ ಮೇಲೆ ಹಾರುವ
ಪ್ರಯತ್ನ ನನ್ನದಾದರೂ
ಸಾಧ್ಯವಾಗದ
ಅಸಹಾಯಕತೆ.
ಕೂಗಿದ್ದೂ ಉಂಟು
ಆದರದು ಕೇಳಿಸಿದ್ದು
ಯಾರಿಗಿಲ್ಲ,ಬದಲಿಗೆ
ಪ್ರತಿಧ್ವನಿಯಾಗಿ
ಅಪ್ಪಳಿಸಿದ್ದು ನನ್ನ ಕಿವಿಗೆ.
ನಿಲ್ಲಲು ನೆಲೆ ಬೇಕಿತ್ತು
ಹುಡುಕಾಟದಲಿ ಸಿಗದೆ
ಮನಸ್ಸಿಗಾದದ್ದು ನಿರಾಸೆ
ಆದರೂ, ಬಿಡದ ಆಶಾವಾದಿತ್ವ
ಕೊನೆಯಿಲ್ಲದ ಮೊದಲಿಲ್ಲ
ಸಿಕ್ಕೇ ಸಿಕ್ಕಿತೆಂಬ ಛಲ.
ಬೇಕಾಗಿದ್ದು ಗಟ್ಟಿ ಹೃದಯ
ಜೊತೆಗಿದ್ದದ್ದು ಧೈರ್ಯ
ಆದರೂ, ಕಣ್ಣಲ್ಲಿದ್ದದ್ದು ನೀರು
ಯಾರಿಗೆ ಕಾಣಿಸೀತು
ಕೆನ್ನೆಗಳ ಮೇಲಿಂದ ಜಾರಿ
ಎಲ್ಲೋ ಬಿದ್ದು ಮರೆಯಾಗಿತ್ತು.
ಹಸಿದ ಹೊಟ್ಟೆಯಾದರೂ
ಕೋಪಕ್ಕೇನೂ ಕಮ್ಮಿಯಿಲ್ಲ
ಕೂಗಾಡಿಬಿಡಬೇಕು
ಕೇಳಲು ಯಾರಿರುವರಲ್ಲಿ
ಉಸಿರಿಗೂ ಮೌನ
ಜೊತೆಗಾರರಿಲ್ಲದ ಒಂಟಿ.
ಎಲ್ಲೂ ನಿಲ್ಲದೇ

ಕೊನೆಯನೂ ತಿಳಿಯದೆ

ಸಾಗುತಿದೆ ಪಯಣ.

ಕ್ಷಣದಲೇ

ಮರಳುಗಾಡಿನಲಿ ಸಿಕ್ಕ
ಗುಟುಕು ನೀರಿನ ಅನುಭವ
ಏನೋ ಸಂತಸ
ಹೊಸತೊಂದು ಅನುಭವ
ಎಂದೂ ಮರೆಯಲಾಗದ ಸ್ಪರ್ಶ
ಕೊನೆಯವರೆಗೂ
ಜೊತೆಗಿರುವೆನೆಂಬ ಭರವಸೆ
ಮನಸು ಕುಣಿದು ಕುಪ್ಪಳಿಸಿತ್ತು
ಮುಚ್ಚಿದ ಕಣ್ಣು ತೆರೆದೆ
ಎದುರಲ್ಲಿ ನೀನು
ಪ್ರಶ್ನೆಯ ಗೆರೆಗಳಿಂದ
ತುಂಬಿರುವ ನಿನ್ನ ಮುಖ
ನೆನಪಿಸಿದ್ದು
ನಾ ಕಂಡ ಕಲ್ಪನೆಯ
ಲೋಕವನ್ನ.

August 8, 2009

ಪ್ರಶ್ನೆಯಾದ ಮೌನ

Filed under: ಅರಿಯದೇ ಬಂದದ್ದು — kavya gowda @ 9:26 am

ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ…
ಘಾಡವಾದ ಪ್ರೀತಿ ನನದು
ಯಾವ ಕಲ್ಮಶವೂ ಇರಲಿಲ್ಲ.
ನನ್ನಷ್ಟೇ ನನ್ನ ಪ್ರೀತಿಯಲ್ಲೂ
ಇದ್ದದ್ದು ನಂಬಿಕೆ.
ಧೈರ್ಯ, ದೃಢ ನಿರ್ಧಾರ,
ಕಲ್ಪನೆ, ಕನಸು, ಭರವಸೆ
ಎಲ್ಲಾ ಇತ್ತು ನನ್ನ ಪ್ರೀತಿಯಲ್ಲಿ
ಆದರೇಕೆ
ಆ ದಿನ ನಾ ಮೌನವಾಗಿದ್ದು?
ನೀನಂದು ಆತುರದಲಿ ಬಂದು
ನಿನ್ನ ಮರೆತುಬಿಡೆಂದಾಗ,
ಪ್ರೀತಿಸಿದ ಪ್ರೀತಿಯನು
ದೂರಮಾಡಿ ವಂಚಿಸಿದಾಗ
ನಾನೇಕೆ ಮೌನವಾದೆ !
ತಡೆಯಬಹುದಿತ್ತು
ಅತ್ತು ಕರೆಯಬಹುದಿತ್ತು
ವಿರೋಧ ವ್ಯಕ್ತ ಪಡಿಸಬಹುದಿತ್ತು
ಆದರೇಕೆ ಬರೀ ನಿಟ್ಟುಸಿರಿನೊಂದಿಗೆ
ನಾ ಮೌನವಾದೆ ?
ಉತ್ತರ ಸಿಗುತಿಲ್ಲ
ಪ್ರಶ್ನೆ ಮರೆಯುತಿಲ್ಲ
ಉತ್ತರ ಸಿಗದ ಈ ಪ್ರಶ್ನೆಯ
ನೆನಪಿನಲಿ
ಪದೇ ಪದೇ ನೆನಪಾಗುತಿದೆ
ನನ್ನ ಆ ದಿನದ ಮೌನ.

June 10, 2009

ಪ್ರೀತಿಸಿದವನು ದೂರಾಗಿರಲು (ನೋವು -ದುಃಖ)

Filed under: ಅರಿಯದೇ ಬಂದದ್ದು — kavya gowda @ 10:01 am

ಬದುಕು ಬೇಸರ ,ಜೀವನ ಕಷ್ಟ
ನೋವಾಗಿದ್ದು ಹೃದಯಕ್ಕೆ
ಸಂಕಟವಾಗಿರುವುದು ಮನಸ್ಸಿಗೆ.
ಮಾತು ಮೌನವಾಗಿರುವುದು
ಚಿಂತೆ ಬೇಡದಿರುವುದು
ಯಾತನೆ ಬೇಸರ ಅವನಿಗಿಲ್ಲ
ಅರ್ಥವಿಲ್ಲದೇ ನಾ ಪಡುತಿರುವೆ.
ಪ್ರೀತಿ ಅಮರ ಸತ್ಯ
ಆದರದು ನನಗಲ್ಲ,
ಅವನನ್ನೇ ಪ್ರೀತಿಸಿದ್ದು
ವಿಪರ್ಯಾಸ ಅವನು ಸಿಗದೆ
ಬೇರೆಯವರವಾನಾಗಿದ್ದು.
ಹುಡುಕಾಟ ನನ್ನದು
ಸಿಕ್ಕಿದ್ದು ಅವನಲ್ಲ ,
ಹಣೆಬರಹ ಬ್ರಹ್ಮನದು
ಅದರಲ್ಲಿ ಅವನ ಹೆಸರಿಲ್ಲ
ಹೋದ ಜನುಮದ ಋಣ
ಈ ಜನ್ಮದ ನಮ್ಮಿಬ್ಬರ ಮಿಲನ.
ಅವನಿಗಾಗಿ ನಾನು
ಹೇಳಲಿಲ್ಲ ಅವನೆಂದೂ
ಕಟ್ಟಿಕೊಂಡೆ ಕನಸುಗಳ
ಬಿಟ್ಟು ಹೋಗಿರುವ ನೆನಪುಗಳ
ಮೋಸ ಅವ ಮಾಡಿದ್ದಲ್ಲ
ನಾ ಹೋಗಿದ್ದು.
ಬದುಕುವ ಮನಸಿಲ್ಲ
ಸಾವು ಬರುತಿಲ್ಲ ಸನಿಹ
ಜೀವನ ಸಾಕಾಗಿದೆ
ಅಂತ್ಯ ನನ್ನಲಿಲ್ಲ.
ಮಾಡಿರುವೆನೇನೋ ಪಾಪ
ಪದುತಿರುವುದದಕೆ ಪ್ರಾಯಶ್ಚಿತ
ಕಾಯುತಿರುವೆ ಕೊನೆಯ ಉಸಿರಿಗೆ
ಸಿಗದೆ ಆಗುತಿದೆ ನೋವು ವ್ಯಥೆ.

June 2, 2009

ನಾನೆಂಬ ಮೂರ್ಖ

Filed under: ಅರಿಯದೇ ಬಂದದ್ದು — kavya gowda @ 7:18 am

ನಾನು ನನದಲ್ಲ

ನನದು ಏನಿಲ್ಲ

ನಾನು ನಾನೆಂಬುವ

ಹುಡುಕಾಟದಲಿ ಅರಿಯುವುದು

ನಾನೆಂಬುದೊಂದು

ಇನ್ನೊಂದರಿಂದ,

ಇನ್ನೊಂದಿಲ್ಲದೇ ನಾನಿಲ್ಲವೆಂದು.

ಹಣತೆ ಇಲ್ಲದೇ ಬೆಳಕಿಲ್ಲ

ಎಣ್ಣೆ ಇರದ ಹಣತೆ ಇಲ್ಲ

ಹಣತೆ , ಎಣ್ಣೆ ಇದ್ದರೆ ಏನಂತೆ

ಬತ್ತಿ ಇಲ್ಲದೇ ಬೆಳಕು

ಮೂಡುವುದೇ ಇಲ್ಲ.

ಗಿಡವಾಗದು ಮೊಳಕೆ

ನೆಲವಿಲ್ಲದೇ,,,

ಮರವಾಗದು ಗಿಡ

ಮಳೆಯಿಲ್ಲದೆ ,ನೀರಿಲ್ಲದೇ.

ಎಲ್ಲಿಂದ ಎಲ್ಲಿಗೋ

ಯಾರಿಂದ ಎಲ್ಲಿಗೋ

ಎಲ್ಲಿಂದ ಯಾರಿಗೋ

ಹುಡುಕ ಹೊರಟರೆ

ಯಾವುದರಿಂದಲೋ

ಯಾವುದಕ್ಕೋ ಒಂದು

ಬಿಡಿಸಲಾರದ ನಂಟು.

ಹುಟ್ಟು ನನದಲ್ಲ

ಸಾವು ನನದಲ್ಲ 

ಗಾಳಿಯಿಲ್ಲದೇ ಉಸಿರಿಲ್ಲ

ಉಸಿರಿಲ್ಲದ ಜೀವವಿಲ್ಲ,

ಎಲ್ಲಿಯೂ ಏನೂ ನನದಲ್ಲಾ

ಮತ್ತೇಕೆ ನಾನು ನನದು

ನಾನೆಂಬ ಮೂರ್ಖ.

May 27, 2009

ಶೂನ್ಯ.

Filed under: ಅರಿಯದೇ ಬಂದದ್ದು — kavya gowda @ 12:23 pm

ಸೃಷ್ಟಿಕರ್ತ ದೇವ

ಸೃಷ್ಟಿಸಿದ್ದೇನೂ ಇಲ್ಲ

ಸೃಷ್ಟಿಸಿದ್ದೆಲ್ಲ ಬರೀ ಶೂನ್ಯ.

ಸೃಷ್ಟಿಸಿದನು ಭೂಮಿಯ

ಅದರಾಕಾರವೊಂದು ಶೂನ್ಯ

ಆಗಸವೂ ಶೂನ್ಯ

ಸೂರ್ಯ ಚಂದ್ರರೂ ಶೂನ್ಯ

ಕಾಲಚಕ್ರವೂ ಶೂನ್ಯ.

ಒಂದಕ್ಕೊಂದು ಕೂಡಿದ

 ಕೂಡಿದ್ದನ್ನು ಕಳೆದ

 ಗುಣಿಸಿ ಭಾಗಿಸಿ ಕೊನೆಗವನು

 ಉಳಿಸಿದ್ದು ಬರೀ ಶೂನ್ಯ.

ನೀನೆಂಬುದು ಏನಿಲ್ಲ

ನಾನೆಂಬುದು ಏನೇನೂ ಇಲ್ಲ

ನಾನು ನೀನು ಇರದೆ

ಬದುಕೆಂಬುದೊಂದು ಶೂನ್ಯ.

ಜನಿಸುವಾಗ ಏನೂ ತಂದಿಲ್ಲ

ಸತ್ತಾಗ ಕೊಂಡುಯ್ಯುವುದು ಏನಿಲ್ಲ

 ಕೊಟ್ಟಿದ್ದು ಏನಿಲ್ಲ

ಪಡೆದದ್ದೂ ಏನೂ ಇಲ್ಲ

ಎಲ್ಲ ಇದ್ದೂ ಏನೂ ಏನಿಲ್ಲದ

 ಈ ಶೂನ್ಯ ಜಗತ್ತಿನಲಿ

ಜೀವನವೊಂದು ಬರೀ ಶೂನ್ಯ.

January 12, 2009

ಬೇಸರ

ಕನಸಿನಲಿ ಬಂದ ರಾಜಕುಮಾರ 

ಬಂದಿರಲು ಸನಿಹ ಬೆಚ್ಚಿ ಬೆದರಿ

ನೋಡಿದ್ದೆ ಕುತೂಹಲದಲಿ

ನನ್ನ ಆತಂಕವನರಿತರೂ

ನನ್ನನುಮತಿಯನೂ ಕೇಳದೇ

ಮುಂಗುರುಳ ಸರಿಸಿ

ಚುಂಭಿಸಿದ್ದ ತುಟಿಗಳಿಗೆ

ರೂಪದಲಿ ಮನ್ಮಥನವ

ರತಿಯಾಗಿದ್ದೆ ನಾ ಕೆಲ ಸಮಯ

ನನ್ನನಾನೇ ಮರೆತು

ಬಿಟ್ಟ ಕಂಗಳ ಮುಚ್ಚದೆ

ನೋಡಿದ್ದೆ ಅವನಂದವ

ನನಗರಿವ ಕೊಡದೇ

ಸೋತಿತ್ತು ಮನ ಅವನಿಗೆ.

 ಒಮ್ಮೆ ಅವನೆದೆಗೆಒರಗಿ

ಹೃದಯ ಬಡಿತವ ಕೇಳುವಾಸೆ

ನನ್ನ ಮನದ ಮಾತ

ಅರಿತವನಂತೆ ಬರಸೆಳೆದು
ಬಾಹುವಿನಲಿ  ಅಪ್ಪಿ

ಮುತ್ತನಿತ್ತಿದ್ದ ಹಣೆಗೆ

ಎಂತಹ ರಸಿಕ ,ಮನಸೋತು

ಒರಗಿದ್ದೆ ಅವನೆದೆಗೆ

ಅವನೆದೆಯ ಬಿಸಿ ಉಸಿರ

ಡವಡವದಲಿ ನನ್ನೆದೆಯ ಬಡಿತ

ಜೋರಾಗುತಿರಲು

ಮನ ಎಚ್ಚರಿಸಿ ಬುದ್ಡಿ ಹೇಳಿ

ಬಿಡಿಸಿಕೊಳ್ಳ ಹೊರಟವಳಾ

ಕಿವಿಯಲ್ಲಿ ಪಿಸುರಿದ್ದ

ಹೋಗದಿರು ನಲ್ಲೇ ನನ್ನಿಂದ ದೂರ

ಪ್ರೀತಿಸಿರುವೆ ನಾನಿನ್ನ ಮನಸಿನಲೆ.

 ಮನಸಾರೆ ಮುದ್ದಿಸಿದೆ 

ಹೃದಯದಲೆ ಪೂಜಿಸಿದೆ

ಪ್ರೀತಿಸಿದೆ ,ಪ್ರೇಮಿಸಿದೆ

ಅವನಿಲ್ಲದೇ ನಾನಿಲ್ಲವಾಗಿ

ನನ್ನೇ ನಾ ಮರೆತಿರಲು

ಕಾಣದೆ ಮರೆಯಾಗಿದ್ದ
ಹೇಳದೇ ಕೇಳದೇ.

ಹುಡುಕಿದೆ

ದಮಯಂತಿ  ಮರೆಯಾದ ನಳನ ಹುಡುಕಿದಂತೆ,

ಕೂಗಿದೆ

ಗಂಟಲು ಕಿತ್ತು ಬರುವವರೆಗೆ,

ರೋಧಿಸಿದೆ

ಹೃದಯ ಬಡಿತ ನಿಲ್ಲಿಸುವಂತೆ

ಅತ್ತಿದ್ದೆ ಕಣ್ಣಲ್ಲಿ  ರಕ್ತ ಸೋರುವಂತೆ.

 
ಬೇಸರ ಗೊಂಡಿತ್ತು ಮನಸು

ಬಾರವಾಗಿತ್ತು ಹೃದಯ

ಸೂರ್ಯನ ಕಿರಣದ ಬೆಳಕು ಮೊಗವ

ತಗುಲಿ ಕನಸ ಎಚ್ಚರಿಸಿದರೂ

ಅಳುತಲೆ ಇದ್ದೇ ಮರೆಯಾದ

ರಾಜಕುಮಾರನ ನೆನಪಿನಲೆ.

January 3, 2009

ಅಸಾಧ್ಯ ಪ್ರಯತ್ನ

ಗಡಿಯಾರದ ಮುಳ್ಳುಗಳು
ತಿರುಗುತಿವೆ
ಚಕ್ರದಂತೆ
ಸಮಯಕ್ಕೆ ಇಲ್ಲ
ಕೊನೆಯೆಂಬ ನಿಲ್ದಾಣ.
ಪ್ರಯತ್ನಿಸುತಿರುವೆ
ಕಟ್ಟಿ ಹಾಕಬೇಕೆಂದು
 ದಿನವ
ಜಂಬದಲಿ ಅಡ್ಡ ಬರುತಿಹುದು
ನನ್ನನ್ನೇ ಅಣಕಿಸಿ ನಾಳೆ.
ಏನ ಮಾಡಿದೆ ನಿನ್ನೆ
ಏನ ಮಾಡಲಿ ನಾಳೆ
ಎನ್ನುವುದರಲೇ
ದಿನವು
ಮುಗಿದು ಬಂದು ನಿಲ್ಲುವುದು
ಮಗದೊಂದು ದಿನವು
ದಿನಕದು ನಾಳೆಯು.
ಇಂದು ಗಳಿಸುವುದು
ನಾಳೆಗಾಗಿಯಾದರೆ
ನಾಳೆಯಲಿ ಗಳಿಸುವುದು
ಅಂದಿಗಾಗಿ ಅಲ್ಲಾ
ಮಗದೊಂದು ನಾಳೆಗಾಗಿ.
ದಿನದಿನವು ಓಡುತಿರಲು
ತಿರುಗಿ ನೋಡದೇ
ನಿನ್ನೆ ಇಂದನು
ಹಗ್ಗ ಬಿಚ್ಚಿ ಹುಚ್ಚು
ಕುದುರೆಯ ಹಿಡಿಯುವಂತೆ
ಸಾಧ್ಯವಿಲ್ಲದ ಅಸಾಧ್ಯ
ಕಾಲವನು ಕಟ್ಟಿಹಾಕುವ
ನನ್ನ ಪ್ರಯತ್ನ.

Next Page »

Theme: Rubric. Blog at WordPress.com.

Follow

Get every new post delivered to your Inbox.